Showing posts with label sudha murthy. Show all posts
Showing posts with label sudha murthy. Show all posts

Sunday, June 13, 2010

ಸುಧಾ ಮೂರ್ತಿಯವರ "ಮನದ ಮಾತು"

ಈಗ ಕೆಲವು ದಿನಗಳ ಹಿಂದೆ ಸುಧಾ ಮೂರ್ತಿಯವರ "ಮನದ ಮಾತು" ಎಂಬ ಪುಸ್ತಕ ಓದಿದೆ.ಸುಧಾ ಮೂರ್ತಿಯವರ ಕೆಲವಷ್ಟು  ಪುಸ್ತಕಗಳನ್ನು ಓದಿದ್ದೇನೆ . ಎಲ್ಲವೂ ಬಹಳ ಸೊಗಸಾಗಿವೆ. ಅವುಗಳನ್ನು ಓದುತ್ತ , ನಾನು ಅವರ ಅಭಿಮಾನಿಯಾಗಿದ್ದೇನೆ :)  .

ಮೊನ್ನೆ ಟಿವಿಯಲ್ಲಿ ಅವರ ಸಂದರ್ಶನ ಮೂಡಿ ಬರುತ್ತಿತ್ತು. ಅವರ ಮುಖದಲ್ಲಿ  ಎಂತಹ ಕಳೆ! ಯಾವಾಗಲೂ ಮುಖದ  ತುಂಬಾ ಮುಗುಳ್ನಗು. ಅವರಿಗೆ ಇಷ್ಥವಾದ ಹಾಡು ಯಾವುದು ಎಂದು ಕೇಳಿ ಅದನ್ನು ಹಾಡಿಸುತ್ತಿದ್ದರು. ಪ್ರತಿಯೊಂದು ಹಾಡಿಗೂ ಚಪ್ಪಾಳೆ ತಟ್ಟಿ , ಜೊತೆಯಲ್ಲಿ ತಾವೂ ಹಾಡಿ ಸಂತೋಷ ಪಡುತ್ತಿದ್ದರು. ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳಲ್ಲೂ ಸಂತೋಷ ಕಾಣಬೇಕೆನ್ನುವುದನ್ನು ಇವರನ್ನು  ನೋಡಿ ಕಲಿಯಬೇಕು.

"ಮನದ ಮಾತು" ಪುಸ್ತಕದಲ್ಲಿ ಅವರ ಜೀವನದ ಕೆಲವು ಘಟನೆಗಳನ್ನು ಕುರಿತು ಬರೆದಿದ್ದಾರೆ. ಸಾಕಷ್ಟು ಸಂಗತಿಗಳು ಎಲ್ಲರಿಗೂ ಅನ್ವಯಿಸುತ್ತವೆ. ಈ ಸಣ್ಣ ಸಣ್ಣ ಕಥೆಗಳಲ್ಲಿ ಕೆಲವು ಮನತಟ್ಟುವ ಮಾತುಗಳ ತುಣುಕುಗಳು ಇಲ್ಲಿವೆ ,

  • "ಬಾಲ್ಯದಲ್ಲಿ ಯಾವುದೇ ವಿಷಯ ಚೆನ್ನಾಗಿ ಕಲಿಯದಿದ್ದರೆ , ಮನೆಯ ಬುನಾದಿಯೇ ಸರಿ ಇಲ್ಲದೆ ಕಟ್ಟಿದ ಕಟ್ಟಡದಂತೆ ಆಗುವುದು. ಮುಂದೆ ಎಂಥ ಉತ್ತಮ ಶಿಕ್ಷಕರಿದ್ದರೂ ಪ್ರಯೋಜನವಿಲ್ಲ. ಅದಕ್ಕೆ ಪಾಶ್ಚಿಮಾತ್ಯ ದೇಶದಲ್ಲಿ ಕೆಳಗಿನ ತರಗತಿಗಳಲ್ಲಿ ಉತ್ತಮ ಶಿಕ್ಷಕರಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಪರಿಶ್ರಮವನ್ನೂ ಪಡುತ್ತಾರೆ" . -- ಲೇಖನ: "ಗುರುವಿಗೆ ನಮನ"
  • "ಕುಷ್ಠ ರೋಗ ಅನುವಂಶಿಕ ರೋಗ , ಒಂದು ಬಾರಿ ಬಂದರೆ ಇದಕ್ಕೆ ಔಷದಿಯೇ ಇಲ್ಲ , ಹೀಗೆ ಹತ್ತು ಹಲವಾರು.ಆದರೆ ಇದೆಲ್ಲ ಸುಳ್ಳು.ಕುಷ್ಟ ರೋಗವೆಂದು ತಿಳಿದ ಕೂಡಲೆ ಔಷದಿಯನ್ನು ತೆಗೆದುಕೊಂಡರೆ ಖಂಡಿತವಾಗಿಯೂ ಸಂಪೂರ್ಣವಾಗಿ ಗುಣಹೊಂದಬಹುದು.ಈ ರೋಗ ಗುಣಪಡಿಸಲು ಬೇಕಾಗುವುದು ಔಷಧಿ ,ತಾಳ್ಮೆ ,ಪ್ರೀತಿ ಮತ್ತು ವಾತ್ಸಲ್ಯ " -- ಲೇಖನ: "ಒಂದು ತುಂಡು ಬಟ್ಟೆ"
  • "ಭಗವಂತನು ಕೆಲವೇ ಜನರನ್ನು ಹಣವಂತರನ್ನಾಗಿ ಮಾಡಿರುತ್ತಾನೆ. ಆದ್ದರಿಂದ ಪರರಿಗೆ ಸಹಾಯ ಮಾಡುವುದು ಅವರ ಕರ್ತವ್ಯವಾಗಿರುತ್ತದೆ." -- ಲೇಖನ: "ಒಂದು ತುಂಡು ಬಟ್ಟೆ"
  • "ಮಕ್ಕಳಿಗೆ ನಾವು ಕೊಡುವುದು ಅಪಾರವಾದ ಆಸ್ತಿಯಲ್ಲ.ಜೀವನವನ್ನು ಅರಿಯುವ ವಿವೇಚನಾ ಶಕ್ತಿ ಮತ್ತು ಆತ್ಮ ಸ್ಥೈರ್ಯ , ಬೇರುಗಳು ಮತ್ತು ರೆಕ್ಕೆಗಳಿದ್ದರೆ ಯುವಕರು ಎಲ್ಲಿ ಬೇಕಾದರೂ ಇರಬಹುದಲ್ಲವೇ?" -- ಲೇಖನ: "ಹಿರಿಯರಿಗೊಂದು ಕಿವಿಮಾತು"
  • "ದಾನವನ್ನು ಶ್ರದ್ಧೆಯಿಂದ, ಸತ್ಪಾತ್ರರಿಗೆ,ಸಂತೋಷದಿಂದ ಕೊಡು. ದಾನ ಪಡೆದವರಿಂದ ಏನನ್ನೂ ಅಪೇಕ್ಷಿಸಬೇಡ. ದಾನ ಕೊಡುವಾಗ ಕುಟುಂಬದವರ ಒಪ್ಪಿಗೆ ಪಡೆ.ಶಕ್ತಿ ಮೀರಿ ಕೊಟ್ಟು ಮನೆಯವರನ್ನು ದರಿದ್ರರನ್ನಾಗಿ ಮಾಡಬೇಡ. ಧರ್ಮ,ಜಾತಿ,ಮತ,ಲಿಂಗ ಮತ್ತು ವಯಸ್ಸಿನ ಕಟ್ಟುಪಾಡು ಹಾಕಬೇಡ". -- ಲೇಖನ: "ಕೆಂಪು ಅಕ್ಕಿಯ ಕಣಜ"

ಹೀಗೆ ಪುಸ್ತಕ ಓದುತ್ತಾ ಹೋದ ಹಾಗೆ ಅವರ ಅನುಭವಗಳಿಂದ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಸಾಕಷ್ಟು ವಿಚಾರಗಳು ಸಿಗುತ್ತವೆ. ಈ ಎಲ್ಲ ವಿಚಾರಗಳನ್ನು ಬರಿಯ ವಿಚಾರಗಳಾಗಿಯೇ ಉಳಿಸದೆ, ತಮ್ಮ ಜೀವನದಲ್ಲಿಯೂ ಪಾಲಿಸುತ್ತಿರುವ ಸುಧಾ ಮೂರ್ತಿಯವರಂತಹ ವ್ಯಕ್ತಿಗಳಿಗೆ ನನ್ನದೊಂದು ನಮನ :)